ಪೆರಡಾಲ, 12-08-2016:ಪೆರಡಾಲ ಶ್ರೀ ಉದನೇಶ್ವರ ಕ್ಷೇತ್ರದಲ್ಲಿ ವರಮಹಾಲಕ್ಷ್ಮೀ ಪೂಜೆ ಶುಕ್ರವಾರ ಜರಗಿತು. ಕ್ಷೇತ್ರದ ಪ್ರಧಾನ ಅರ್ಚಕ ವೇದಮೂರ್ತಿ ಶಿವರಾಮ ಭಟ್ ಪೆರಡಾಲ ಪೂಜಾ ವಿಧಿವಿಧಾನಗಳನ್ನು ಪೂರೈಸಿದರು. ವಿದ್ವಾನ್ ಕೇಕಣಾಜೆ ಕೇಶವ ಭಟ್ ಪ್ರವಚನವನ್ನು ನಡೆಸಿಕೊಟ್ಟರು. ನೂರಾರು ಮಾತೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮಧ್ಯಾಹ್ನ ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ತಾಳಮದ್ದಳೆ “ತ್ರಿಶಂಕು ಸ್ವರ್ಗ” ಜರಗಿತು.
ಪೆರಡಾಲ, 06-08-2016:ಪೆರಡಾಲ ಶ್ರೀ ಉದನೇಶ್ವರ ಸ್ವಾಮಿ ಸನ್ನಿಧಿಯಲ್ಲಿ 12ನೇ ತಾರೀಕು ಶುಕ್ರವಾರದಂದು ಶ್ರೀ ವರಮಹಾಲಕ್ಷ್ಮೀ ಪೂಜೆಯು ನಡೆಯಲಿರುವುದು. ಬೆಳಗ್ಗೆ 9 ಘಂಟೆಗೆ ಪೂಜೆ ಪ್ರಾರಂಭವಾಗಲಿರುವುದು. ಈ ಸಂದರ್ಭದಲ್ಲಿ ‘ವರಮಹಾಲಕ್ಷ್ಮೀ ಪೂಜೆಯ ಮಹತ್ವ’ ಎಂಬ ವಿಷಯದಲ್ಲಿ ವಿದ್ವಾನ್ ಕೇಕಣಾಜೆ ಕೇಶವ ಭಟ್ ಪ್ರವಚನ ನೀಡಲಿದ್ದಾರೆ. ಅಪರಾಹ್ನ 2.30ರಿಂದ ‘ತ್ರಿಶಂಕು ಸ್ವರ್ಗ’ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಭಾಗವತರಾಗಿ ಪುತ್ತಿಗೆ ರಘುರಾಮ ಹೊಳ್ಳ, ಸಿರಿಬಾಗಿಲು ರಾಮಕೃಷ್ಣ ಮಯ್ಯ, ಚೆಂಡೆ ಮದ್ದಳೆಯಲ್ಲಿ ಶಂಕರನಾರಾಯಣ ಭಟ್ ಪದ್ಯಾಣ, ಲಕ್ಷ್ಮೀನಾರಾಯಣ ರಾವ್ ಅಡೂರು ಹಾಗೂ ಮುಮ್ಮೇಳದಲ್ಲಿ ವಿದ್ವಾನ್ ಕೃಷ್ಣ ಕುಮಾರ್ ಆಚಾರ್ಯ ಮೈಸೂರು, ವಿದ್ವಾನ್ ಕೇಕಣಾಜೆ ಕೇಶವ ಭಟ್ಟ, ತಾರಾನಾಥ ವರ್ಕಾಡಿ, ಸುಬ್ರಾಯ ಹೊಳ್ಳ ಕಾಸರಗೋಡು, ರವಿರಾಜ ಪನೆಯಾಲ ಮೊದಲಾದವರು ಭಾಗವಹಿಸಲಿರುವರು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪೆರಡಾಲ ವಸಂತವೇದಪಾಠ ಸಮಾರೋಪಪೆರಡಾಲ, 25-05-2016:ವೈದಿಕ ಪರಂಪರೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಹಲವಾರು ಸಂವತ್ಸರಗಳಿಂದ ನಡೆದುಬರುತ್ತಿರುವ ಈ ಪಾಠಶಾಲೆಯು ಸಮಾಜಕ್ಕೆ ತುಂಬಾ ಉಪಕಾರಿಯಾಗಿದೆ. ಅಂತರ್ ದೃಷ್ಟಿಯನ್ನು ತೆರೆಯಲು ಮನಸ್ಸಿನ ಏಕಾಗ್ರತೆಗೆ ವೇದಮಂತ್ರ ಸಹಕಾರಿ ಎಂದು ಡಾ| ವಿದ್ಯಾ ಗೌತಮ ಕುಳಮರ್ವ ನುಡಿದರು. ಅವರು ಬುಧವಾರ ಕಾಸರಗೋಡು ಹೊಸದುರ್ಗ ಹೈವ ಬ್ರಾಹ್ಮಣ ಸಭಾ ಇದರ ವತಿಯಿಂದ ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ಅನೇಕ ವರ್ಷಗಳಿಂದ ನಡೆದುಬರುತ್ತಿರುವ ವಸಂತ ವೇದಪಾಠಶಾಲೆಯ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು. ನಿವೃತ್ತ ಅಧ್ಯಾಪಕ ಕಾನ ಈಶ್ವರ ಭಟ್ ಮಾತನಾಡಿ ಇಲ್ಲಿ ಕಲಿತ ವಿದ್ಯೆಯನ್ನು ನಿಮ್ಮ ಮುಂದಿನ ಜೀವನದಲ್ಲಿ ಉಪಯೋಗಿಸಿ ಎಂದು ಮಕ್ಕಳಿಕೆ ಹಿತನುಡಿಗಳನ್ನು ಹೇಳಿದರು. ಬೀಜದಲ್ಲಿ ಹೇಗೆ ಇಡೀ ವೃಕ್ಷದ ಶಕ್ತಿಯು ನಿಕ್ಷಿಪ್ತವಾಗಿದೆಯೋ ಹಾಗೆಯೇ ವೇದಮಂತ್ರಗಳಲ್ಲಿ ಎಲ್ಲಾ ದೇವತೆಗಳ ಶಕ್ತಿಯು ಅಡಗಿದೆ. ಅದನ್ನು ಕಲಿತು ಅನುಷ್ಠಾನಿಸಿ ಅನುಗ್ರಹ ಪಡೆದು ಭಾರತದ ಶ್ರೇಷ್ಠತೆಯನ್ನು ಸಾರುವವರಾಗಿ ಕೀರ್ತಿಗಳಿಸಿರಿ ಎಂದು ಸಭಾಧ್ಯಕ್ಷ ಕುಳಮರ್ವ ಶಂಕರನಾರಾಯಣ ಭಟ್ಟ ತಮ್ಮ ಭಾಷಣದಲ್ಲಿ ತಿಳಿಸಿದರು. ವಿದ್ಯಾರ್ಥಿಗಳು ತಮ್ಮ ಅನಿಸಿಕೆಯನ್ನು ತಿಳಿಸಿದರು. ಮೂರೂ ತರಗತಿಗಳಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಾದ ಕೃಪಾನಿಧಿ, ಮುಕುಂದ, […]
ಪೆರಡಾಲ ಭಾಗವತ ಸಪ್ತಾಹದ 6ನೇ ದಿನದ ಪ್ರವಚನಪೆರಡಾಲ, 17-05-2016:ಕಲಿಯುಗದಲ್ಲಿ ಭಕ್ತಿ ಮಾರ್ಗದ ಮೂಲಕ ಭಗವಂತನನ್ನು ಮೆಚ್ಚಿಸಬೇಕು. ಮನುಷ್ಯನು ದೇವತ್ವಕ್ಕೆ ಸಾಗಬೇಕಾದರೆ ಭಾಗವತ ಸಪ್ತಾಹ ಬೇಕು ಎಂದು ವೇದಮೂರ್ತಿ ಕೇಶವ ಭಟ್ ಕೇಕಣಾಜೆ ನುಡಿದರು. ಅವರು ಮಂಗಳವಾರ ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ ಭಾಗವತ ಸಪ್ತಾಹದ 6ನೇ ದಿನ ಕಥಾಪ್ರವಚನ ನಡೆಸಿಕೊಡುತ್ತಿದ್ದರು. ಭಾಗವತ ಕಥಾಶ್ರವಣದಿಂದ ಅಜ್ಞಾನವು ದೂರವಾಗುತ್ತದೆ. ತನ್ನನ್ನು ತಾನು ದೇವರಿಗೆ ಸಮರ್ಪಿಸಿಕೊಂಡರೆ ಭಗವಂತನ ಸಾಮೀಪ್ಯವನ್ನು ಗಳಿಸಬಹುದು. ಕಥಾಶ್ರವಣದಿಂದ ಐಶ್ವರ್ಯ, ರೋಗಶಾಂತಿ, ಧನಲಾಭ, ಕಾರ್ಯಸಿದ್ಧಿ ಪ್ರಾಪ್ತವಾಗುವುದು ಎಂದರು. ಬೆಳಗ್ಗೆ ಶ್ರೀ ವಿಷ್ಣುಸಹಸ್ರನಾಮ ಪಾರಾಯಣ, ಸಾಮೂಹಿಕ ಪ್ರಾರ್ಥನೆ, ಅರ್ಚನೆ, ಶ್ರೀಮದ್ಭಾಗವತ ಪಾರಾಯಣ, ಶ್ರೀಕೃಷ್ಣ ಕಲ್ಪೋಕ್ತ ಪೂಜೆ ನಡೆಯಿತು. ಪಾರಾಯಣ ಭಾಗಗಳಾದ ಸ್ಯಮಂತಕೋಪಾಖ್ಯಾನ, ಬಾಣಾಸುರ ಪ್ರಕರಣ, ಜರಾಸಂಧ ವಧೆ, ಶಿಶುಪಾಲಾದಿಗಳ ವಧೆ, ಕುಚೇಲೋಪಾಖ್ಯಾನ, ಭೃಗುಲಾಂಛನ, ಯಧುವಂಶಕ್ಕೆ ಋಷಿಷಾಪ, ಶ್ರೀಕೃಷ್ಣ ನಿರ್ಯಾಣದ ಪೂರ್ವಸಿದ್ಧತೆ, ಹಂಸಾವತಾರ (ಹಂಸಾಖ್ಯಾನ)ವನ್ನು ಪ್ರಸ್ತುತಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಗಣೇಶ್ ಭಟ್ ಮುಣ್ಚಿಕ್ಕಾನ ಮುನ್ನಡೆಸುವ ಚಲಿಸುವ ಗೋಆಲಯದಲ್ಲಿ ಗೋವುಗಳಿಗೆ ಪೂಜೆಯನ್ನು ನೆರವೇರಿಸಲಾಯಿತು. ಅನೇಕ ಭಕ್ತರು ಗೋಮಾತೆಗೆ ಆರತಿಯನ್ನು ಬೆಳಗಿದರು.
ಪೆರಡಾಲ, 14-05-2016:ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ ಭಾಗವತ ಸಪ್ತಾಹ ಅಂಗವಾಗಿ ಭಾಗವತ ಪುರಾಣಾಧಾರಿತ ಯಕ್ಷಗಾನ `ದಕ್ಷಯಜ್ಞ-ಧ್ರುವ ಚರಿತ್ರೆ’ ಶುಕ್ರವಾರ ರಾತ್ರಿ ಜರಗಿತು.
ಪೆರಡಾಲದಲ್ಲಿ ಭಾಗವತ ಸಪ್ತಾಹ 2ನೇ ದಿನಪೆರಡಾಲ, 13-05-2016:ಮನುಜರು ಪರೋಪಕಾರಿಯಾಗಿರಬೇಕು, ನಾನು ನನ್ನದು ಎಂಬುದನ್ನು ಬಿಟ್ಟರೆ ನಮಗೆ ಶ್ರೇಯಸ್ಸು ಲಭಿಸುತ್ತದೆ ಎಂದು ವೇ.ಮೂ. ಮುರಳೀಕೃಷ್ಣ ಭಟ್ ಕಾಂಚನ ನುಡಿದರು.ಅವರು ಶುಕ್ರವಾರ ಸಂಜೆ ಪೆರಡಾಲ ಶ್ರೀ ಉದನೇಶ್ವರ ಕ್ಷೇತ್ರದಲ್ಲಿ ನಡೆಯುತ್ತಿರುವ ಭಾಗವತ ಸಪ್ತಾಹದ ಎರಡನೇ ದಿನದ ಕಥಾಪ್ರವಚನದ ಸಂದರ್ಭ ನುಡಿದರು. ಪ್ರಧಾನ ಪಾರಾಯಣ ಭಾಗಗಳಾದ ಕಪಿಲಾವತಾರ, ಕಪಿಲೋಪದೇಶ, ದಕ್ಷಯಜ್ಞ, ಧ್ರುವ ಚರಿತ್ರೆ, ಪೃಥು ಚರಿತ್ರೆ, ಪುರಂಜನೋಪಾಖ್ಯಾನ, ಋಷಭಾವತಾರ, ಭರತೋಪಾಖ್ಯಾನವನ್ನು ಎರಡನೇ ದಿನ ಪ್ರವಚನ ನಡೆಸಲಾಯಿತು. ಈ ಕಥಾಶ್ರವಣದ ಫಲವಾಗಿ ಧನಧಾನ್ಯ ಅಭಿವೃದ್ಧಿಯಾಗುವುದು. ಬೆಳಗ್ಗೆ ವಿಷ್ಣುಸಹಸ್ರನಾಮ ಪಾರಾಯಣ, ಸಾಮೂಹಿಕ ಪ್ರಾರ್ಥನೆ, ಅರ್ಚನೆ, ವೇದಮೂರ್ತಿ ಕೇಶವ ಭಟ್ ಕೇಕಣಾಜೆ ಅವರಿಂದ ಶ್ರೀಮದ್ಭಾಗವತ ಪಾರಾಯಣ ನಡೆಯಿತು. ರಾತ್ರಿ ಭಾಗವತ ಪುರಾಣಾಧಾರಿತ ಯಕ್ಷಗಾನ ದಕ್ಷಯಜ್ಞ-ಧ್ರುವ ಚರಿತ್ರೆ.
ಪೆರಡಾಲ, 13-05-2016:ಪೆರಡಾಲ ಶ್ರೀ ಉದನೇಶ್ವರ ಕ್ಷೇತ್ರದಲ್ಲಿ ನಡೆದುಬರುತ್ತಿರುವ ಭಾಗವತ ಸಪ್ತಾಹ ಕಾರ್ಯಕ್ರಮದಂಗವಾಗಿ ಭಾಗವತ ಪುರಾಣಾಧಾರಿತ ಯಕ್ಷಗಾನ ಸಪ್ತಾಹವು ಗುರುವಾರ ಆರಂಭಗೊಂಡಿತು. 19ನೇ ತಾರೀಕಿನ ತನಕ ರಾತ್ರಿ 8ರಿಂದ 12ರ ತನಕ ನುರಿತ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ಬಯಲಾಟವು ನಡೆಯಲಿರುವುದು. ಗುರುವಾರ ಎಡನೀರು ಶ್ರೀ ಗೋಪಾಲಕೃಷ್ಣ ಕೃಪಾಪೋಷಿತ ಯಕ್ಷಗಾನ ಮಂಡಳಿಯವರು ರಾಜಾ ಪರೀಕ್ಷಿತ-ವರಾಹಾವತಾರ ಎಂಬ ಕಥಾಭಾಗವು ಪ್ರದರ್ಶಿಸಲ್ಪಟ್ಟಿತು. ಪ್ರಖ್ಯಾತ ಪುಂಡುವೇಷಧಾರಿ ಶ್ರೀಧರ ಭಂಡಾರಿ ಪುತ್ತೂರು ಅವರು ಅತಿಥಿ ಕಲಾವಿದರಾಗಿ ಭಾಗವಹಿಸಿ ಶ್ರೀಕೃಷ್ಣನ ಪಾತ್ರದಲ್ಲಿ ಮಿಂಚಿದರು. ಮಾಧವ ತಲ್ಪಣಾಜೆ ವರಾಹನ ಪಾತ್ರದಲ್ಲಿ, ಸಂತೋಷ್ ಮಾನ್ಯ ಹಿರಣ್ಯಾಕ್ಷನ ಪಾತ್ರದಲ್ಲಿ ಜನಮನಸೂರೆಗೈದರು.
ಪೆರಡಾಲ,12-05-2016:ಪೆರಡಾಲ ಶ್ರೀ ಉದನೇಶ್ವರ ಕ್ಷೇತ್ರದಲ್ಲಿ ಕ್ಷೇತ್ರ ತಂತ್ರಿವರ್ಯ ಬ್ರಹ್ಮಶ್ರೀ ರವೀಶತಂತ್ರಿ ಕುಂಟಾರು ಇವರ ನಿರ್ದೇಶಾನುಸಾರ ವೇದಮೂರ್ತಿ ಕೇಶವ ಭಟ್ ಕೇಕಣಾಜೆ ಮತ್ತು ವೇದಮೂರ್ತಿ ಶ್ರೀ ಮುರಳೀಕೃಷ್ಣ ಭಟ್ ಕಾಂಚನ ಇವರ ನೇತೃತ್ವದಲ್ಲಿ ಭಾಗವತ ಸಪ್ತಾಹವು ಗುರುವಾರ ಆರಂಭಗೊಂಡಿತು. ಬೆಳಗ್ಗೆ ದೇವನಾಂದೀ, ಪುಣ್ಯಾಹವಾಚನ, ಮಹಾಸಂಕಲ್ಪ, ಆಚಾರ್ಯರಿಗೆ ಮಧುಪರ್ಕಾದಿ ಉಪಚಾರ, ಋತ್ವಿಗ್ವರಣ, ಪ್ರತಿಸರಬಂಧನ, ಸಪ್ತಾಹ ಯಜ್ಞ ಮಂಟಪ ಪ್ರವೇಶ, ಸಾಮೂಹಿಕ ಪ್ರಾರ್ಥನೆ, ಅರ್ಚನೆ, ಸರ್ವತೋಭದ್ರ ಮಂಡಲಾರಾಧನೆ, ಕಲಶ ಪ್ರತಿಷ್ಠೆಯೊಂದಿಗೆ ಶ್ರೀಮದ್ಭಾಗವತ ಪಾರಾಯಣ ಆರಂಭವಾಯಿತು. ಶ್ರೀಕೃಷ್ಣ ಕಲ್ಪೋಕ್ತ ಪೂಜೆ ಹಾಗೂ ಶ್ರೀಮದ್ಭಾಗವತದ ಪೂರ್ವಾಂಗ – ಭಾಗವತ ರಚನೆ, ಪರೀಕ್ಷಿತ ಚರಿತ್ರೆ, ಶುಕಾಗಮನ, ಉಪದೇಶಾರಾಂಭ, ವಿದುರೋದ್ಭವ ಸಂವಾದ, ವರಾಹಾವತಾರ ಕರ್ದಮ – ದೇವದೂತಿ ವಿವಾಹ ಮುಂತಾದ ವಿಷಯಗಳಲ್ಲಿ ಪಾರಾಯಣ ನಡೆಯಿತು. ಮಧ್ಯಾಹ್ನ ಭೋಜನ ಪ್ರಸಾದದ ನಂತರ ಶ್ರೀಮದ್ಭಾಗವತ ಕಥಾಪ್ರವಚನ ನಡೆಯಿತು. ರಾತ್ರಿ ಶ್ರೀಮದ್ಭಾಗವತ ಪುರಾಣಾಧಾರಿತ ಯಕ್ಷಗಾನ ಸಪ್ತಾಹ ಪ್ರಾರಂಭವಾಯಿತು. ವೇದಮೂರ್ತಿ ಶಿವಪ್ರಸಾದ ಪೆರಡಾಲ ಅವರು ಶ್ರೀಕೃಷ್ಣ ಕಲ್ಪೋಕ್ತ ಪೂಜೆಯನ್ನು ನೆರವೇರಿಸಿದರು. ವೇದಮೂರ್ತಿ ಹರಿನಾರಾಯಣ ಮಯ್ಯ ಅವರು ಭಕ್ತಿಶ್ರದ್ಧಾಪೂರ್ವಕ ಸೇವೆ ಮಾಡಿಸಿದ ಭಕ್ತರ ಅಭೀಷ್ಟವನ್ನು ಈಡೇರಿಸುವಂತೆ ಶ್ರೀ ದೇವರಲ್ಲಿ ಪ್ರಾರ್ಥಿಸಿ ಪ್ರಸಾದವನ್ನು ನೀಡಿದರು. […]
ಪೆರಡಾಲ, 5 ಏಪ್ರಿಲ್ 2016:ನಮ್ಮೊಳಗಿನ ದೇವರನ್ನು ನಾವು ಕಂಡುಕೊಳ್ಳಲು ಬೇಕಾದ ಶಕ್ತಿ ವೇದಾಧ್ಯಯನದಿಂದ ನಮಗೆ ಲಭಿಸುತ್ತದೆ. ಗುರುಹಿರಿಯರು ನಡೆಸಿಕೊಂಡು ಬಂದ ಪೂಜೆ ಪುನಸ್ಕಾರಾದಿಗಳನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ನಮಗಿದೆ. ವೇದಾಧ್ಯಯನದಿಂದ ಮಾನಸಿಕ ನೆಮ್ಮದಿ ಕೂಡಾ ಲಭಿಸುತ್ತದೆ ಎಂದು ಕಾಸರಗೋಡು ಹೊಸದುರ್ಗ ಹೈವ ಬ್ರಾಹ್ಮಣ ಸಭಾ, ಪೆರಡಾಲದ ಅಧ್ಯಕ್ಷ ಕುಳಮರ್ವ ಶಂಕರನಾರಾಯಣ ಭಟ್ ಅಭಿಪ್ರಾಯಪಟ್ಟರು.ಅವರು ಮಂಗಳವಾರ ಬೆಳಗ್ಗೆ ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ಕಾಸರಗೋಡು ಹೊಸದುರ್ಗ ಹೈವ ಬ್ರಾಹ್ಮಣ ಸಭಾ ನಡೆಸಿಕೊಂಡುಬರುತ್ತಿರುವ ವಸಂತ ವೇದ ಪಾಠ ಶಾಲೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಿದ್ದರು.ವಿದ್ಯಾರ್ಥಿಗಳ ಹೆತ್ತವರಲ್ಲೋರ್ವರಾದ ಎಡೆಪ್ಪಾಡಿ ಮಹಾಲಿಂಗೇಶ್ವರ ಭಟ್ ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪೆರಡಾಲ ದೇವಸ್ಥಾನದ ಪ್ರಧಾನ ಅರ್ಚಕ ಹಾಗೂ ವೇದ ಅಧ್ಯಾಪಕ ಶಿವರಾಮ ಭಟ್ ಶುಭಾಶಂಸನೆಗೈದರು.ಅಧ್ಯಾಪಕ ವೇದಮೂರ್ತಿ ವೆಂಕಟೇಶ್ವರ ಭಟ್ ಪಟ್ಟಾಜೆ ಮಾತನಾಡಿ ನಮ್ಮ ಕುಲಗುರುಗಳಾದ ಶ್ರೀರಾಮಚಂದ್ರಾಪುರ ಮಠದ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಅನುಗ್ರಹದಿಂದ 1958 ಇಸವಿಯಿಂದಲೇ ಇಲ್ಲಿ ವೇದಪಾಠವು ನಡೆದುಕೊಂಡು ಬರುತ್ತಿದೆ. ವಿದ್ಯಾರ್ಥಿಗಳು ಹಾಗೂ ಹೆತ್ತವರು ಆಸಕ್ತಿಯಿಂದ ವಿದ್ಯಾರ್ಜನೆಗೆ ಬರುತ್ತಿರುವುದು ಸಂತಸ ತರುತ್ತಿದೆ ಎಂದು ಹೇಳಿದರು.ಸಾಮೂಹಿಕ ಗುರುವಂದನೆಯೊಂದಿಗೆ ಕಾರ್ಯಕ್ರಮ ಆರಂಭಿಸಲಾಯಿತು. […]