ಪೆರಡಾಲ,12-05-2016:
ಪೆರಡಾಲ ಶ್ರೀ ಉದನೇಶ್ವರ ಕ್ಷೇತ್ರದಲ್ಲಿ ಕ್ಷೇತ್ರ ತಂತ್ರಿವರ್ಯ ಬ್ರಹ್ಮಶ್ರೀ ರವೀಶತಂತ್ರಿ ಕುಂಟಾರು ಇವರ ನಿರ್ದೇಶಾನುಸಾರ ವೇದಮೂರ್ತಿ ಕೇಶವ ಭಟ್ ಕೇಕಣಾಜೆ ಮತ್ತು ವೇದಮೂರ್ತಿ ಶ್ರೀ ಮುರಳೀಕೃಷ್ಣ ಭಟ್ ಕಾಂಚನ ಇವರ ನೇತೃತ್ವದಲ್ಲಿ ಭಾಗವತ ಸಪ್ತಾಹವು ಗುರುವಾರ ಆರಂಭಗೊಂಡಿತು. ಬೆಳಗ್ಗೆ ದೇವನಾಂದೀ, ಪುಣ್ಯಾಹವಾಚನ, ಮಹಾಸಂಕಲ್ಪ, ಆಚಾರ್ಯರಿಗೆ ಮಧುಪರ್ಕಾದಿ ಉಪಚಾರ, ಋತ್ವಿಗ್ವರಣ, ಪ್ರತಿಸರಬಂಧನ, ಸಪ್ತಾಹ ಯಜ್ಞ ಮಂಟಪ ಪ್ರವೇಶ, ಸಾಮೂಹಿಕ ಪ್ರಾರ್ಥನೆ, ಅರ್ಚನೆ, ಸರ್ವತೋಭದ್ರ ಮಂಡಲಾರಾಧನೆ, ಕಲಶ ಪ್ರತಿಷ್ಠೆಯೊಂದಿಗೆ ಶ್ರೀಮದ್ಭಾಗವತ ಪಾರಾಯಣ ಆರಂಭವಾಯಿತು.
ಶ್ರೀಕೃಷ್ಣ ಕಲ್ಪೋಕ್ತ ಪೂಜೆ ಹಾಗೂ ಶ್ರೀಮದ್ಭಾಗವತದ ಪೂರ್ವಾಂಗ – ಭಾಗವತ ರಚನೆ, ಪರೀಕ್ಷಿತ ಚರಿತ್ರೆ, ಶುಕಾಗಮನ, ಉಪದೇಶಾರಾಂಭ, ವಿದುರೋದ್ಭವ ಸಂವಾದ, ವರಾಹಾವತಾರ ಕರ್ದಮ – ದೇವದೂತಿ ವಿವಾಹ ಮುಂತಾದ ವಿಷಯಗಳಲ್ಲಿ ಪಾರಾಯಣ ನಡೆಯಿತು. ಮಧ್ಯಾಹ್ನ ಭೋಜನ ಪ್ರಸಾದದ ನಂತರ ಶ್ರೀಮದ್ಭಾಗವತ ಕಥಾಪ್ರವಚನ ನಡೆಯಿತು. ರಾತ್ರಿ ಶ್ರೀಮದ್ಭಾಗವತ ಪುರಾಣಾಧಾರಿತ ಯಕ್ಷಗಾನ ಸಪ್ತಾಹ ಪ್ರಾರಂಭವಾಯಿತು.
ವೇದಮೂರ್ತಿ ಶಿವಪ್ರಸಾದ ಪೆರಡಾಲ ಅವರು ಶ್ರೀಕೃಷ್ಣ ಕಲ್ಪೋಕ್ತ ಪೂಜೆಯನ್ನು ನೆರವೇರಿಸಿದರು. ವೇದಮೂರ್ತಿ ಹರಿನಾರಾಯಣ ಮಯ್ಯ ಅವರು ಭಕ್ತಿಶ್ರದ್ಧಾಪೂರ್ವಕ ಸೇವೆ ಮಾಡಿಸಿದ ಭಕ್ತರ ಅಭೀಷ್ಟವನ್ನು ಈಡೇರಿಸುವಂತೆ ಶ್ರೀ ದೇವರಲ್ಲಿ ಪ್ರಾರ್ಥಿಸಿ ಪ್ರಸಾದವನ್ನು ನೀಡಿದರು. ಶಾರಾದಾ ಟೀಚರ್ ಕನ್ನೆಪ್ಪಾಡಿ, ಐ.ವಿ. ಭಟ್ ಕಾಸರಗೋಡು, ವೆಂಕಟಕೃಷ್ಣ ಮಕ್ಕಿಕ್ಕಾನ, ಶಿವರಾಮ ಭಟ್ ಪೆರಡಾಲ ಮೊದಲಾದವರು ಉಪಸ್ಥಿತರಿದ್ದರು.